== ಸ್ಥಳ == ಶ್ರೀ ಜೈನ ಮಠದ ಬಸದಿಯು ಮೂಡಬಿದಿರೆಯ ಇಂದಿನ ಶ್ರೀ ಜೈನಮಠದಲ್ಲಿ ಇದೆ. == ಆರಾಧ್ಯ ದೇವತೆ == ಇದು ಕಳೆದ ವರ್ಷ ಇಲ್ಲಿಯ ಪ್ರಸ್ತುತ ಸ್ವಾಮೀಜಿ ಭಾರತ ಭೂಷಣ ಭಟ್ಟಾರಕ ಸ್ವಸ್ತಿಶ್ರೀ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ಅವರಿಂದ ಜೀರ್ಣೋದ್ಧಾರಗೊಂಡಿದೆ. ಈ ಬಸದಿಯು ಗಾತ್ರದಲ್ಲಿ ಚಿಕ್ಕದು. ಮೂಲ ನಾಯಕ ಭಗವಾನ್ ಪಾಶ್ರ್ವನಾಥ ಸ್ವಾಮಿ. ಇಲ್ಲಿ ವಿಶೇಷವೆಂದರೆ ದೇವಿ ಮಾತೆ ಪದ್ಮಾವತಿಯೊಂದಿಗೆ ಶ್ರೀ ಮಠದ ಪಟ್ಟದ ಆರಾಧ್ಯದೇವರು ಕೂಷ್ಮಾಂಡಿನಿ ದೇವಿ ಕೂಡ ಆರಾಧಿಸಲ್ಪಡುತ್ತಾರೆ. ನಲ್ಲೂರು ಬೀದಿಯಲ್ಲಿ ನೆಲೆನಿಂತ ಕೂಷ್ಮಾಂಡಿನಿ ದೇವಿ ಅನಂತರ ಮೂಡಬಿದರೆಯಲ್ಲಿ ಶ್ರೀ ಮಠ ನಿರ್ಮಾಣಗೊಂಡಾಗ ಅಲ್ಲಿ ನೆಲೆನಿಂತು ಆರಾಧಿಸಲ್ಪಡುತ್ತಿದ್ದಾರೆ. ಸ್ವಸ್ತಿ ಶ್ರೀ ಮದಭಿನವ ಭಾರತ ಭೂಷಣ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ಅವರು ಇದರ ಪಕ್ಕದಲ್ಲಿರುವ ನಿವಾಸ ಮಠದಲ್ಲಿ ವಾಸ್ತವ್ಯವಿದ್ದಾರೆ. == ಆವರಣ == ಕಳೆದ ವರ್ಷ 2013ರಲ್ಲಿ ಈ ಬಸದಿ ಜೀರ್ಣೋದ್ಧಾರ ಗೊಳ್ಳುತ್ತಿರುವುದು ಇದರ ಅಸ್ತಿತ್ವವನ್ನು ಪ್ರತ್ಯೇಕವಾಗಿ ಗುರುತಿಸಿಕೊಳ್ಳುವುದಕ್ಕೆ ಮಠದ ಕಟ್ಟಡದಿಂದ ಬಸದಿಯವರೆಗೆ ಪ್ರತ್ಯೇಕವಾದ ಒಂದು ಪ್ರಾಂಗಣವನ್ನು ನಿರ್ಮಿಸಿಕೊಳ್ಳಲಾಗಿದೆ. ಆ ಮೂಲಕ ಬಸದಿಗೆ ಒಂದು ಪ್ರದಕ್ಷಿಣೆ ಬರಲು ಅವಕಾಶವನ್ನು ಕಲ್ಪಿಸಿಕೊಡಲಾಗಿದೆ. ಈ ಪ್ರಾಂಗಣದಿಂದ ಬಸದಿಯ ಅಧಿಷ್ಠಾನಕ್ಕೆ ಏರಲು ಮೆಟ್ಟಿಲುಗಳನ್ನು ನಿರ್ಮಿಸಲಾಗಿದೆ. ಅಲ್ಲಿಯೇ ಇರುವ ಜಗಲಿಯನ್ನು ಪ್ರಾರ್ಥನಾ ಮಂಟಪವನ್ನಾಗಿ ಬಳಸಿಕೊಳ್ಳಬಹುದು. == ಗರ್ಭಗುಡಿ == ಗರ್ಭಗೃಹವನ್ನು ನೂತನ ಶಿಲಾ ಫಲಕಗಳನ್ನು ಜೋಡಿಸುವ ಮೂಲಕ ಹೆಚ್ಚು ವ್ಯವಸ್ಥಿತ ಹಾಗೂ ಅಲಂಕೃತವಾಗುವಂತೆ ಸುಧಾರಣೆ ತರಲಾಗಿದೆ. ಮೂಲ ನಾಯಕ ಶ್ರೀ ಪಾರ್ಶ್ವನಾಥ ಸ್ವಾಮಿ. ಪೂಜೆ ಸಲ್ಲಿಸುವುದಕ್ಕಾಗಿ ಪುರೋಹಿತರು ನಿಂತುಕೊಳ್ಳಲು ಅನುಕೂಲವಾಗುವಂತೆ ಸುಖನಾಸಿ ಯನ್ನು ರೂಪಿಸಲಾಗಿದೆ. ಈ ಸುಕನಾಸಿಯ ಎದುರಿಗಿರುವ ಗಂಧ ಕೋಟಿಯಲ್ಲಿ ನಾನಾ ಜಿನ ಬಿಂಬಗಳನ್ನು ಪೂಜೆಗಾಗಿ ಜೋಡಿಸಲಾಗಿದೆ. ಅವುಗಳ ಪೈಕಿ ಶ್ರುತ ಗಣಧರ ಪಾದ ಶ್ರೀ ಪಾಶ್ರ್ವನಾಥ ಸ್ವಾಮಿಯ ಪರ್ಯಂಕಸನದಲ್ಲಿರುವ ಬಿಂಬ ಹಾಗೂ ಸಿದ್ದರ ಸ್ಪಟಿಕದ ಬಿಂಬಗಳು ಮನಸ್ಸನ್ನಾಕರ್ಷಿಸುತ್ತದೆ. ಇಲ್ಲಿ ಪ್ರಾತಃಕಾಲ ಮಧ್ಯಾಹ್ನ ಮತ್ತು ಸಾಯಂಕಾಲ ಹೀಗೆ ಪ್ರತಿದಿನ ಮೂರು ಹೊತ್ತು ಪೂಜೆಗಳು ನಡೆಯುತ್ತವೆ. ಪೂಜಾ ಸಂದರ್ಭದ ಜ್ಯೋತಿಗಳ ಪ್ರಭೆಯಲ್ಲಿ ಬೆಳಗುವ ಬಿಂಬಗಳು ವಿಶೇಷ ಆಧ್ಯಾತ್ಮಿಕ ಆನಂದವನ್ನು ಉಂಟು ಮಾಡುತ್ತವೆ. ಕೆಲವು ಜಿನ ಬಿಂಬಗಳನ್ನು ಬೆಳ್ಳಿಯ ಪ್ರಭಾವಳಿಗಳಿಂದ ಅಲಂಕರಿಸಲಾಗಿದೆ. == ಪೂಜೆ == ಪ್ರಸ್ತುತ ಭಟ್ಟಾರಕ ಭಾರತ ಭೂಷಣ ಸ್ವಸ್ತಿ ಶ್ರೀ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮಿಗಳ ಪೀಠಾರೋಹಣದ ಬಳಿಕ ಈ ಭಾಗದಲ್ಲಿ ವಿಶೇಷ ಧರ್ಮಪ್ರಭಾವನೆ ನಡೆಯುತ್ತಿದ್ದು, ಈ ಮಂದಿರದಲ್ಲಿ ಪ್ರತಿ ಮಂಗಳವಾರ ವಿಶೇಷ ಪೂಜೆ ಭಜನೆ ಮತ್ತಿತರ ಆರಾಧನಾ ಕಾರ್ಯಕ್ರಮಗಳು ಜರುಗುತ್ತಿವೆ. == ಧಾರ್ಮಿಕ ಪ್ರವಚನಗಳು == ಪೂಜಾನಂತರ ಪೂಜ್ಯ ಭಟ್ಟಾರಕರು ಧರ್ಮ ಪ್ರಭಾವದ ಕಾರ್ಯದ ಅಂಗವಾಗಿ ಧಾರ್ಮಿಕ ಪ್ರವಚನ ನಡೆಸುತ್ತಾರೆ. ಪುರಾಣ ಪುಣ್ಯ ಕಥೆಗಳನ್ನು ಹೇಳುತ್ತಾರೆ. ಮಾರ್ಗದರ್ಶನ ಮಾಡುತ್ತಾರೆ. ಮೂಡಬಿದರೆಯಲ್ಲಿನ ಮಂದಿರಗಳು ಸುಸ್ಥಿತಿಗೆ ಬರುತ್ತಾ ಪೂಜಾದಿಗಳು ಹೆಚ್ಚು ವ್ಯವಸ್ಥಿತವಾಗಿ ನಡೆಯುತ್ತಿದೆ. ಈ ಧರ್ಮ ಪುನರುತ್ಥಾನದ ಕಾರ್ಯಕ್ರಮದಲ್ಲಿ ವಿವಿಧ ಪ್ರದೇಶಗಳಿಂದ ಜನರು ಆಗಮಿಸಿ ಶ್ರದ್ಧೆಯಿಂದ ಪಾಲ್ಗೊಳ್ಳುತ್ತಿದ್ದಾರೆ. ಶ್ರೀಮಠವು ಜೈನ ಕಾಶಿ ಮೂಡಬಿದಿರೆಯ 16 ಬಸದಿಗಳ ಆಡಳಿತ ಕೇಂದ್ರವೂ ಆಗಿದೆ. ಭವ್ಯ ಜನರ ಶ್ರದ್ಧಾ ಕೇಂದ್ರವಾಗಿದೆ. == ಉಲ್ಲೇಖಗಳು ==